Tuesday, June 9, 2026

ಯಕ್ಷಗಾನ ಕಲಾವಿದರಿಗೆ ಸಾಮಾಜಿಕ ಭದ್ರತೆ: ಒಂದು ಅವಶ್ಯಕತೆ

ಯಕ್ಷಗಾನವು ಪ್ರಪಂಚದ ಶ್ರೇಷ್ಠ ಸಾಂಸ್ಕೃತಿಕ ಆಭರಣವಾಗಿದೆ. ತನ್ನ ವಿಶಿಷ್ಟ ಶೈಲಿಯಲ್ಲಿ ಕಥೆಯನ್ನು ನೃತ್ಯ, ಹಾಡು ಮತ್ತು ಅಶು ಸಂಭಾಷಣೆಯ ಮೂಲಕ ಪ್ರೇಕ್ಷಕರ ಮುಂದೆ ಇಡುವ ಯಕ್ಷಗಾನವು ವಿಶೇಷ ಕಲೆಯಾಗಿ ಪ್ರಸಿದ್ಧವಾಗಿದೆ. ಇದನ್ನು ಬಹುಶಃ ತಲಾಂತರಗಳಿಂದ ಅನೇಕರು ಜೀವನೋಪಾಯವಾಗಿ ಬೆಳೆಸಿಕೊಂಡು ಬಂದಿದ್ದರೂ, ಈ ಕಲಾವಿದರು ಸಾಮಾಜಿಕ ಭದ್ರತೆಗಾಗಿ ಸಾಕಷ್ಟು ಹೋರಾಟವನ್ನು ಎದುರಿಸುತ್ತಿದ್ದಾರೆ. ಯಕ್ಷಗಾನ ಕಲಾವಿದರ ಜೀವನಪದ್ಧತಿ: ಯಕ್ಷಗಾನ ಕಲಾವಿದರ ಜೀವನ ಶ್ರಮ ಮತ್ತು ತ್ಯಾಗದಿಂದ ಕೂಡಿದೆ. ಅವರು ಪ್ರಸಂಗ, ತಾಳಮದ್ದಳೆ, ಬಯಲಾಟ , ಅಭ್ಯಾಸ, ಕಲಿಕೆಯಲ್ಲಿ ನಿರತರಾಗಿರುತ್ತಾರೆ. ಆದಾಗ್ಯೂ, ಅಂತರಂಗದಲ್ಲಿ ತಳಮಳವಾಗುವ ವಿಷಯವೇನೆಂದರೆ, ಇವರಲ್ಲಿ ಹೆಚ್ಚಿನವರು ತಮ್ಮ ಭವಿಷ್ಯ, ಆರೋಗ್ಯ ಮತ್ತು ಆರ್ಥಿಕ ಭದ್ರತೆ ಬಗ್ಗೆ ಭದ್ರತೆಯನ್ನು ಹೊಂದಿಲ್ಲ. ಹಲವಾರು ಕಲಾವಿದರು ತಮ್ಮ ವೃತ್ತಿಯಲ್ಲಿ ಅನನ್ಯವಾಗಿದ್ದರೂ ಅವರಿಗೆ ನೀಡಲ್ಪಡುವ ಸಂಭಾವನೆ, ಆರೋಗ್ಯ ಸೇವೆಗಳು, ಮತ್ತು ನಿವೃತ್ತಿ ನಂತರದ ಸೌಲಭ್ಯಗಳು ಕಡಿಮೆ. ಯಕ್ಷಗಾನದಿಂದ ಆರ್ಥಿಕ ವಹಿವಾಟು : ದಕ್ಷಿಣೋತ್ತರ ಕರಾವಳಿಯಲ್ಲಿ ಯಕ್ಷಗಾನದ ಒಟ್ಟು 40 ರಿಂದ 50 ಮೇಳಗಳಿರಬಹುದು .ಎಂಡೋಮೆಂಟ್ ದೇವಸ್ಥಾನಗಳ ವ್ಯವಸ್ಥೆಯಲ್ಲಿ 15 ಕ್ಕಿಂತ ಹೆಚ್ಚು ಇವೆ . ಮತ್ತು ಸಕ್ರಿಯ ಮೇಳಗಳ ಸಂಖ್ಯೆ 40 ಇರಬಹುದೆಂದು ಅಂದಾಜಿಸಬಹುದು . ಪ್ರತಿ ಮೇಳದಲ್ಲಿ ಸುಮಾರು 40 ಕಲಾವಿದರಂತೆ 50 ಮೇಳಗಳಲ್ಲಿ 2000 ಜನ ಕಲಾವಿದರು ಸತತ 6 ತಿಂಗಳುಗಳ ಕಾಲ 180 ದಿನ ವೃತ್ತಿಯನ್ನು ಮಾಡುತ್ತಾರೆ .ಸಕ್ರಿಯ ಮೇಳಗಳೆಂದು 40 ಮೇಳಗಳನ್ನು ಪರಿಗಣಿಸಿದರೆ ಮೇಳಗಳಿಗೆ ಸರಿ ಸುಮಾರು ಸರಾಸರಿ ಪ್ರತಿ ಆಟಕ್ಕೆ ರೂಪಾಯಿ 60000 ದಂತೆ ವೀಳ್ಯವೆಂದು ಅಂದಾಜಿಸಬಹುದು. ಈ ನಿಟ್ಟಿನಲ್ಲಿ ಕರಾವಳಿ ಜಿಲ್ಲೆಗಳ ಯಕ್ಷಗಾನದಿಂದಾಗುವ ಪ್ರದರ್ಶನಾವಧಿಯ ಆರ್ಥಿಕ ವ್ಯವಹಾರ ಸರಿ ಸುಮಾರು 43 .20 ಕೋಟಿಯಷ್ಟು . ಇದರ ಜೊತೆಗೆ ಈ ಕಾರ್ಯಕ್ರಮದಿಂದಾಗಿ ನಡೆಯುವ ಇತರ ವ್ಯಾಪಾರ, ಅನ್ನಸಂತರ್ಪಣೆಯಂತಹ ಕಾರ್ಯಕ್ರಮ ಮತ್ತು ಸುಡುಮದ್ದು, ಇತರ ವಾದ್ಯ ವೈಭವಗಳು ಇತ್ಯಾದಿ ಸೇರಿದರೆ ಸರಿ ಸುಮಾರು 50 .00 ಕೋಟಿಯಷ್ಟು ಆರ್ಥಿಕ ವ್ಯವಹಾರ ನಡೆಯುತ್ತದೆಯೆಂದು ಅಂದಾಜಿಸಬಹುದು. ಇ0ದು ಜಿಲ್ಲೆಯ ಸಾಧಾರಣ ಉದ್ಯಮಗಳಿಂದಲೂ ಹೆಚ್ಚಿನ ಆರ್ಥಿಕ ವ್ಯವಹಾರ ಯಕ್ಷಗಾನದಿಂದ ಆಗುತ್ತಿದೆ. ಇದು ಕರಾವಳಿ ಜಿಲ್ಲೆಗಳ ಆರ್ಥಿಕತೆಗೆ ಯಕ್ಷಗಾನದ ಬಹುದೊಡ್ಡ ಕೊಡುಗೆ . ಇಂತಹ ದೊಡ್ಡ ಆರ್ಥಿಕ ವಹಿವಾಟಿಗೆ ಕಾರಣರಾಗುವ ಕಲಾವಿದರ ಬದುಕು ಅತಂತ್ರವೇ ಎನ್ನುವ ಪ್ರಶ್ನೆ ಕಾಡದಿರದು . ಸಾಮಾಜಿಕ ಭದ್ರತೆಯ ಅಗತ್ಯತೆ 1. ಆರ್ಥಿಕ ಸ್ಥಿರತೆ: ಕಲಾವಿದರಿಗೆ ಖಾತರಿಯ ಆರ್ಥಿಕ ಸಬಲತೆಯ ಅಗತ್ಯವಿದೆ. ಪ್ರತಿಯೊಬ್ಬರಿಗೂ ತಕ್ಕಮಟ್ಟಿನ ಸಂಭಾವನೆ ಸಿಗುತ್ತಿದ್ದರೂ ಹಲವು ಕಲಾವಿದರಿಗೆ ಕಷ್ಟಕರ ಜೀವನವಿದೆ. ಯಕ್ಷಗಾನ ಆಕಾಡೆಮಿ ಈ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿ ವೇತನ, ಫಲಾನುಭವಿಗಳ ಯೋಜನೆಗಳು ಮತ್ತು ಆರ್ಥಿಕ ನೆರವು ಯೋಜನೆಗಳನ್ನು ಒದಗಿಸಬೇಕು. 2. ಆರೋಗ್ಯ ವಿಮೆ : ಯಕ್ಷಗಾನ ಕಲಾವಿದರಿಗೆ ಆರೋಗ್ಯ ಸಮಸ್ಯೆಗಳು ಸಾಮಾನ್ಯ. ನೃತ್ಯ ಮತ್ತು ರಂಗಭೂಮಿಯ ತೀವ್ರತೆಯಿಂದಾಗಿ ಅವರಿಗೆ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ತೊಂದರೆಗಳು ಉಂಟಾಗಬಹುದು. ಆರೋಗ್ಯ ವಿಮಾ ಯೋಜನೆಗಳು, ಮತ್ತು ತುರ್ತು ಆಸ್ಪತ್ರೆಯ ವ್ಯವಸ್ಥೆ ಇವರಿಗೆ ಅತ್ಯಂತ ಮುಖ್ಯ. 3. ನಿವೃತ್ತಿ ಯೋಜನೆಗಳು ಯಕ್ಷಗಾನ ವೃತ್ತಿಯು ಶಾರೀರಿಕ ಶ್ರಮದ ಮೇಲಾಧಾರಿತವಿರುತ್ತದೆ. ವಯಸ್ಸಾದ ನಂತರ ಇವರಿಗೆ ಕೆಲಸ ನಿರ್ವಹಿಸಲು ಕಷ್ಟವಾಗಬಹುದು. ಹೀಗಾಗಿ, ನಿವೃತ್ತಿ ಧನ ಮತ್ತು ಪಿಂಚಣಿ ಯೋಜನೆಗಳ ತಂತ್ರವನ್ನು ಸರ್ಕಾರವು ಖಡ್ಡಾಯವಾಗಿ ರೂಪಿಸಬೇಕಾಗಿದೆ. 4. ಕಲೆಗೆ ಪ್ರೋತ್ಸಾಹ: ಸರ್ಕಾರ ಮತ್ತು ಸಾಮಾಜಿಕ ಸಂಸ್ಥೆಗಳು ಈ ಕಲೆಯನ್ನು ಇನ್ನಷ್ಟು ತಲುಪಿಸಬೇಕಾಗಿದ್ದು, ವಿಶೇಷವಾಗಿ ಯುವಪೀಳಿಗೆಗೆ ತಲುಪಿಸಲು ಪ್ರಾಮುಖ್ಯ ನೀಡಬೇಕು. ಯಕ್ಷಗಾನದ ಸಂಸ್ಕೃತಿ ಮತ್ತು ಪರಂಪರೆಯು ಮುಂದುವರಿಯಬೇಕಾದರೆ ನೂತನ ಕಲಾವಿದರಿಗೆ ತರಬೇತಿ ಮತ್ತು ಪ್ರೋತ್ಸಾಹ ನೀಡುವುದು ಅಗತ್ಯ.ಇದಕ್ಕಾಗಿ ಮಾನ್ಯತೆ ಪಡೆದ ಕೋರ್ಸ್ಗಳನ್ನು ಮಾಡಿ ಅವಕಾಶಕ್ಕೊಂದು ಅರ್ಹತೆಯನ್ನು ಪರಿಗಣಿಸಬೇಕು . 5 .ಕಲಾವಿದರ ಸಂಘಟನೆ: ಯಕ್ಷಗಾನ ಕಲಾವಿದರು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಮತ್ತು ಅಭಿವೃದ್ದಿಗಾಗಿ ಒಟ್ಟಾಗಿ ನಿಲ್ಲಬೇಕು. ಸರ್ಕಾರ ಮತ್ತು ಬಾಗಿದಾರರೊಂದಿಗೆ ಮಾತುಕತೆ ನಡೆಸಲು ಒಬ್ಬರು ,ಯಕ್ಷಗಾನ ಅಕಾಡೆಮಿಯು ಪ್ರತಿನಿಧಿಯ೦ತೆ ವ್ಯವಹರಿಸಬೇಕು 6.ಸಮುದಾಯದ ಒಲವು ಮತ್ತು ಬೆಂಬಲ: ಕಲಾವಿದರ ಜೀವನ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಸಮುದಾಯದ ಬೆಂಬಲ ಅಗತ್ಯವಿದೆ. ಯಕ್ಷಗಾನದ ಪ್ರೇಮಿಗಳು, ಕಲಾ ಹಿತೈಷಿಗಳು ಮತ್ತು ಪೋಷಕರು ಇಂತಹ ಪ್ರಯತ್ನಗಳಲ್ಲಿ ಪಾಲ್ಗೊಂಡು ಸಹಕಾರ ನೀಡಬಹುದು.ಒಂದು ಸಮಷ್ಟಿ ನಿಧಿಯನ್ನು ಸ್ಥಾಪಿಸಬಹುದು. 7 .ಅಭಿವೃದ್ಧಿಗೆ ಉಪಾಯಗಳು: ಸರ್ಕಾರವು ಈ ನಿಟ್ಟಿನಲ್ಲಿ ಗಮನ ಹರಿಸಿ ಸರ್ಕಾರದಿಂದ ನಿಯಮಿತವಾಗುವ ಆರ್ಥಿಕ ನೆರವು ಯೋಜನೆಗಳು, ವಿಮಾ ಯೋಜನೆಗಳು, ಮತ್ತು ಪಿಂಚಣಿ ಕಲಾವಿದರಿಗೆ ಸಹಾಯಕವಾಗಬಹುದು. ಈ ಪ್ರಯತ್ನವು ಕಲಾವಿದರ ಭದ್ರತೆಯೊಂದಿಗೆ ಯಕ್ಷಗಾನವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುತ್ತದೆ. 7 .ಕಲಾವಿದರಿಗಿರಬೇಕಾದ ಸಾಮಾಜಿಕ ಪ್ರಜ್ಞೆ ಯಕ್ಷಗಾನ ಕಲಾವಿದರು ನಮ್ಮ ಸಂಸ್ಕೃತಿಯ ಜೀವಂತ ಪ್ರತಿಬಿಂಬಗಳು. ಇವರಿಗೆ ಸಕಾಲದಲ್ಲಿ ನೀಡುವ ಸಾಮಾಜಿಕ ಭದ್ರತೆ ಅವರ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಜೊತೆಗೆ, ಯಕ್ಷಗಾನದ ಪರಂಪರೆಯನ್ನೂ ಕಾಯುವಲ್ಲಿ ಸಹಕಾರಿಯಾಗಲಿದೆ.ಇದಕ್ಕೆ ಸ್ವತಹ ಕಲಾವಿದರು ಮುತುವರ್ಜಿ ವಹಿಸಿ ಸಂಘಟಿತರಾಗಿ ಮುನ್ನೆಲೆಗೆ ಬರಬೇಕು ,ಬೇರೆ ಯಾರಾದರೂ ಇದರ ನೇತೃತ್ವ ವಹಿಸುತ್ತಾರೆ ಎಂದು ನಿರೀಕ್ಷಿಸಬಾರದು .ಮತ್ತು ಇಂತಹ ವ್ಯವಸ್ಥೆಗೆ ತೊಡಗುವವರಲ್ಲಿ ಸಹಕರಿಸಬೇಕು ,ಉಪೇಕ್ಷಿಸಬಾರದು. ಇಂತಹ ಧನಾತ್ಮಕ ಧೋರಣೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸಹಾಯ ಕೇಳುವ ದೈನ್ಯತೆ ತಪ್ಪುತ್ತದೆ ಮತ್ತು ಸ್ವಾಭಿಮಾನದ ಬದುಕು ಕಲಾವಿದರದ್ದಾಗುತ್ತದೆ. ಹೀಗೆ ಕರಾವಳಿಯ ಆರ್ಥಿಕತೆಯ ಹರಿವಿನಲ್ಲಿ ಬಹುದೊಡ್ಡ ಕೊಡುಗೆಯನ್ನು ನೀಡುತ್ತಿರುವ ಯಕ್ಷಗಾನ ಕ್ಷೇತ್ರದ ಕಲಾವಿದರಿಗೆ ಈ ನಿಟ್ಟಿನಲ್ಲಿ ಯಕ್ಷಗಾನ ಅಕಾಡೆಮಿ, ಸರಕಾರ ಧನಾತ್ಮಕ ಚಿಂತನೆಯೊಂದಿಗೆ ಯೋಜನೆಯೊಂದನ್ನು ಅಗತ್ಯ ರೂಪಿಸಬೇಕಿದೆ ಮತ್ತು ಈ ಕ್ಷೇತ್ರವನ್ನು ಇನ್ನಷ್ಟು ಸುಧೃಢ ಗೊಳಿಸಬೇಕಿದೆ ಯಕ್ಷಗಾನಮ್ ಗೆಲ್ಗೆ ಕುಮಾರ ಸುಬ್ರಹ್ಮಣ್ಯ ಮುಳಿಯಾಲ

No comments:

Post a Comment